ಬೆಳಗಾವಿ ಅಧಿವೇಶನದ ವೇಳೆ ನೇಕಾರರ ಸಮಸ್ಯೆ ತರಲು ನಿರ್ಧಾರ..!ಮುಖಂಡರಿಂದ ಸಭೆ
ಅಧಿವೇಶನ ವೇಳೆ ನೇಕಾರ ಸಮಸ್ಯೆ ಗಮನಕ್ಕೆ ತರಲು ನಿರ್ಧಾರ
ರಾಜ್ಯಮಟ್ಟದ ನೇಕಾರರ ಚಿಂತನ-ಮಂಥನ ಕಾರ್ಯಕ್ರಮ; ನೇಕಾರ ಮುಖಂಡರ ನಿರ್ಧಾರ
ಬೆಳಗಾವಿ: ಸರ್ಕಾರಕ್ಕೆ ನೇಕಾರರ ಸಮಸ್ಯೆಗಳ ಬಗ್ಗೆ ತಿಳಿಸುವ ಸಲುವಾಗಿ ಡಿ.೧೩ರಿಂದ ನಡೆಯುವ ಬೆಳಗಾವಿ ನಡೆವ ಚಳಿಗಾಲ ಅಧಿವೇಶನದ ವೇಳೆ ವಿವಿಧ ಭಾಗದ ನೇಕಾರರು ಒಗ್ಗಟ್ಟಾಗಿ ಪಾದಯಾತ್ರೆ ಕೈಗೊಂಡು ಹೋರಾಟ ಮಾಡಲು ಭಾನುವಾರ ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದಿಂದ ಬೆಳಗಾವಿಯ ಖಾನಾಪುರ ರಸ್ತೆಯಲ್ಲಿರುವ ಉದ್ಯಮಬಾಗ್ನ ಫೌಂಡಿ ಕ್ಲಸ್ಟರ್ನಲ್ಲಿ ನಡೆದ ರಾಜ್ಯಮಟ್ಟದ ನೇಕಾರರ ಚಿಂತನ-ಮಂಥನ ಸಂವಾದ ಕಾರ್ಯಕ್ರಮದಲ್ಲಿ ನಿರ್ಧರಿಸಲಾಯಿತು.
ಈ ವೇಳೆ ಅಥಿತಿಯಾಗಿ ಆಗಮಿಸಿದ್ದ ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ ಮಾತನಾಡಿ, ಪ್ರಸ್ತುತ್ ದಿನಗಳಲ್ಲಿ ನೇಕಾರರ ಸ್ಥಿತಿ ತುಂಬಾ ಶೋಚನೀಯವಾಗಿದೆ. ಅದರಲ್ಲೂ ಕೊರೋನಾದಿಂದ ನೇಕಾರ ಉದ್ಯಮ ನೆಲಕಚ್ಚಿದೆ. ಹೀಗಾಗಿ ಅನೇಕ ನೇಕಾರರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ನೇಕಾರ ಸಮುದಾಯ ಕೂಡಾ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಅಥಣಿ ವಿರಕ್ತಮಠದ ಮಹಾಂತ ದೇವರು ಸಾನ್ನಿಧ್ಯ ವಹಿಸಿ, ನೇಕಾರರು ಆರ್ಥಿಕವಾಗಿ ಮುಂದೆ ಬರಬೇಕು ಎಂದರೆ ಮೊದಲು ಒಗ್ಗಟ್ಟಾಗಿ ಹೋರಾಡುವುದನ್ನು ಕಲಿಬೇಕು ಎಂದು ಹೇಳಿದರು.
ಕರ್ನಾಟಕ ಜವಳಿ ಗಿರಣಿಗಳ ಮಹಾಮಂಡಳದ ಉಪಾಧ್ಯಕ್ಷ ರಾಜಶೇಖರ ಬಿ.ಸೂರಗಾಂವಿ ಪ್ರಚಲಿತ ನೇಕಾರಿಕೆ ವೃತ್ತಿ ಎದುರಿಸುತ್ತಿರುವ ಸವಾಲುಗಳ್ಯಾವುವು ಹಾಗೂ ಪರಿಹಾರಗಳೇನು ? ಎನ್ನುವ ವಿಷಯ ಮಂಡಿಸಿದರು. ಸಾಹಿತಿ ಶಂಕರ ಬುಚಡಿ ಅವರು ಹೊರ ರಾಜ್ಯಗಳಲ್ಲಿ ನೇಕಾರರಿಗಿರುವ ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳು ಮತ್ತು ವಿಶೇಷ ಮೀಸಲಾತಿ ಸವಿಸ್ತಾರವಾಗಿ ಮಾತನಾಡಿದರು. ಸಮಾಜದ ಹಿರಿಯರಾದ ಪಾಂಡು ಕಾಮಕರ ಅಧ್ಯಕ್ಷತೆ ವಹಿಸಿದ್ದರು. ಇನ್ನೂ ರಾಜ್ಯದಲ್ಲಿ ೨ ವರ್ಷಗಳಿಂದ ೩೨ ಮಂದಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಸಮಸ್ಯೆಗಳ ಕುರಿತು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಮಾಡುವ ಮತ್ತು ಸರ್ಕಾರದ ಗಮನಸೆಳೆಬೇಕು.
ನೇಕಾರರಿಗೆ ಕಾರ್ಮಿಕ ಕಾರ್ಡ್ ನೀಡಬೇಕು. ಶೈಕ್ಷಣಿಕ ಸೌಲಭ್ಯಗಳು ದೊರೆಯಬೇಕು. ನೇಕಾರರ ಸಮುದಾಯದಲ್ಲಿ ಉಂಟಾಗುತ್ತಿರುವ ವಧು ಸಮಸ್ಯೆ ಕುರಿತು ಈ ವೇಳೆ ಚರ್ಚೆ ನಡೆದವು. ಈ ವೇಳೆ ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ, ಕಟಕೋಳ ಗ್ರಾಮದ ನೇಕಾರ ಮುಖಂಡರಾದ ಮಾರುತಿ ಗರಡಿಮನಿ, ಗೋಪಾಲ ಗದಗಿನ, ರಾಮಚಂದ್ರ ಮುಗಳಿ, ಬಸವರಾಜ ಜಲಗೇರಿ ಸೇರಿದಂತೆ ನಾನಾ ತಾಲೂಕಿನ ನೇಕಾರ ಮುಖಂಡರು ಈ ಸಂವಾದಲ್ಲಿ ಪಾಲ್ಗೊಂಡಿದ್ದರು