ಬೈರಿದೇವರಕೊಪ್ಪದ “ದರ್ಗಾಕೆ” ಬೆಲೆ ಕಟ್ಟಿದ “ಸರ್ಕಾರ” ಎಷ್ಟು ಗೊತ್ತಾ..!
ಹುಬ್ಬಳ್ಳಿ: ಬಿ.ಆರ್.ಟಿ.ಎಸ್ ಯೋಜನೆ ಅನುಷ್ಠಾನಕ್ಕಾಗಿ ಕೆಲ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಅವಶ್ಯವಾಗಿತ್ತು. ಈ ಹಿನ್ನಲೆಯಲ್ಲಿ ಬೈರಿದೇವರಕೊಪ್ಪದ ಸೈಯದ್ ಮೆಹಮೂದ ಶಾ ಖಾದ್ರಿ ದರ್ಗಾ ತೆರವು ಕೂಡ ಒಂದಾಗಿತ್ತು. ಇಂದು ಅದರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಸ್ಲಿಂ ಸಮಾಜದ ಮುಖಂಡರೆ ಸ್ವಯಂ ಆಗಿ ಗೋರಿ ಸ್ಥಳಾಂತರ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ಅದಕ್ಕೆ ಸಹಕಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ತೆರವು ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಗಾ ಕಮೀಟಿಯವರಿಗೆ 2020ರ ಮಾರ್ಚ್ ಅಂತಿಮ ನೋಟೀಸ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕಮೀಟಿಯವರು ನ್ಯಾಯಾಲಯ ಮೆಟ್ಟಿಲು ಏರಿದ್ದರು. ಇದೇ ಡಿ.16ರಂದು ಕಮಿಟಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. 44 ಮೀ. ರಸ್ತೆ ನಿರ್ಮಿಸಲು ಸಿದ್ದರಾಗಿ ಎಂದು ಆದೇಶಿಸಿತ್ತು ಎಂದರು.
ತೆರವು ಕಾರ್ಯಾಚರಣೆಗಾಗಿ ಬಿ.ಆರ್.ಟಿ.ಎಸ್ ಅವರು ಜಿಲ್ಲಾಡಳಿತದ ಹಾಗೂ ಪೊಲೀಸರ ಸಹಕಾರ ಕೋರಿದ್ದರು. ಆದಷ್ಟು ಬೇಗ ದರ್ಗಾ ಸ್ಥಳವನ್ನು ಬಿ.ಆರ್.ಟಿ.ಎಸ್ ವ್ಯಾಪ್ತಿಗೆ ತೆಗೆದುಕೊಳ್ಳುತ್ತೇವೆ. ಆ ಸ್ಥಳದಲ್ಲಿದ್ದ ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಲಾಗಿದೆ ಎಂದರು.
ಮುಸ್ಲಿಂ ಸಮಾಜದ ಧರ್ಮಗುರುಗಳು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋರಿ ಸ್ಥಳಾಂತರಕ್ಕೆ ಯಾವ ರೀತಿಯ ಪದ್ದತಿ ಅನುಸರಿಸುತ್ತಾರೋ ಅದಕ್ಕೆ ಅಗತ್ಯವಾದ ಯಂತ್ರೋಪಕರಣಗಳನ್ನು, ಕಾರ್ಮಿಕರನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಬಿ.ಆರ್.ಟಿ.ಎಸ್ ಯೋಜನೆಯಲ್ಲಿ ಇನ್ನಷ್ಟು ಧಾರ್ಮಿಕ ಸ್ಥಳಗಳ ತೆರವು ಕಾರ್ಯಾಚರಣೆ ಕೈಗೊಳ್ಳುವುದು ಅವಶ್ಯವಿದ್ದು, ಅದನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.