ಹುಬ್ಬಳ್ಳಿ: ಬೈಪಾಸ್ ನಲ್ಲಿ ನಿನ್ನೆ ರಾತ್ರಿ ನಡೆದ ಅಪಘಾತವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಸ್ತೆ ಅಗಲೀಕರಣ ಹಾಗೂ ಚತುಷ್ಪದ ರಸ್ತೆಯ ಕಾಮಗಾರಿಯನ್ನು ಎರಡು ವರ್ಷಗಳಲ್ಲಿಯೇ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಮುಕ್ತ ಮಾಡುವ ಮೂಲಕ ಅಪಘಾತಗಳಿಗೆ ಬ್ರೇಕ್ ಹಾಕಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ವಿಶ್ವಾಸ ವ್ಯಕ್ತಪಡಿಸಿದರು.
ಬೈಪಾಸ್ ಬಳಿಯಲ್ಲಿ ನಡೆದ ಅಪಘಾತದ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಿನ್ನೆ ರಾತ್ರಿ ಭೀಕರ ಅಪಘಾತ ನಡೆದಿದ್ದು, ಪರಿಹಾರ ಧನ ವಿತರಿಸಲು ಸಿಎಂ ಜೊತೆಗೆ ಚರ್ಚಿಸುವೆ. ಅಲ್ಲದೇ ಈ ಬೈಪಾಸ್ ನಲ್ಲಿ ಸಾಕಷ್ಟು ಅಪಘಾತಗಳು ನಡೆದಿದ್ದು, ಕೂಡಲೇ ಈ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಈಗಾಗಲೇ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ ಜೂನ್ ಮೊದಲ ವಾರದಲ್ಲಿ ಟೆಕ್ನಿಕಲ್ ಟೀಮ್ ಭೇಟಿ ನೀಡಿ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಿಗೆ ಎರಡು ವರ್ಷ ಟೈಮ್ ಬಾಂಡ್ ಇರುತ್ತದೆ. ಟೈಮ್ ಬಾಂಡ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಕೋರಲಾಗಿದೆ ಎಂದು ಅವರು ಹೇಳಿದರು.
ಕಿಮ್ಸ್ ಕುರಿತು ಮಾತನಾಡಿದ ಅವರು, ಈಗಾಗಲೇ ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದು ಬಿಂಬಿತವಾಗಿದೆ. ಇಲ್ಲಿ ಎಲ್ಲವೂ ಸರಿಯಾಗಿದೆ. ಅನುದಾನ ಹಾಗೂ ಸಿಬ್ಬಂದಿ ಕೊರತೆಗಳಿದ್ದರೇ ಆಡಳಿತ ಮಂಡಳಿ ನನ್ನ ಗಮನಕ್ಕೆ ತಂದರೇ ಕೂಡಲೇ ವ್ಯವಸ್ಥೆ ಸರಿಪಡಿಸುವ ಬಗ್ಗೆ ಆರೋಗ್ಯ ಸಚಿವರು ಹಾಗೂ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.