ಹುಬ್ಬಳ್ಳಿಯಲ್ಲಿ “ಚಾರ್ಲಿಗೆ” ಯಾಮಾರಾಸಿ “ಇಸ್ಪೀಟ್ ಅಡ್ಡೆ” ಮೇಲೆ “ಹೆಡ್ ಕಾನ್ಸ್ಟೇಬಲ್” ದಾಳಿ… ಸಿಕ್ಕಿದೆಲ್ಲಾ….ಸ್ವಾಹಾ..!
ಹುಬ್ಬಳ್ಳಿ: ನಗರದಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ಸಿಬ್ಬಂದಿಯೊಬ್ಬರೇ ದಾಳಿಯನ್ನು ಮಾಡಿ ಅಲ್ಲಿ ಸಿಕ್ಕ ಹಣ ಹಾಗೂ ಮೊಬೈಲ್ ಗಳನ್ನು ತಮ್ಮ ಬಳಿ ಇಟ್ಟುಕೊಂಡು ಇಲಾಖೆಗೆ ಹಾಗೂ ಠಾಣಾ ಅಧಿಕಾರಿಗೆ ಧೋಖಾ ಮಾಡಿದ ಘಟನೆ ಮೂರೂವರೆ ತಿಂಗಳ ನಂತರ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಜನ ಜಂಗುಳಿ ಪ್ರದೇಶದಲ್ಲಿನ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲವೊಂದಿಷ್ಟು ಯುವಕರು ಇಸ್ಪೀಟ್ ಆಟ ಆಡುತ್ತಿದ್ದ ಮಾಹಿತಿ ಆಧರಿಸಿ ಕ್ರೈಂ ಹೆಡ್ ಕಾನ್ಸ್ಟೇಬಲ್ ಏಕಾಂಗಿಯಾಗಿ ದಾಳಿಯನ್ನು ಮಾಡಿ ಯುವಕರನ್ನು ಹೆದರಿಸಿ ಬಳಿ ಸಿಕ್ಕ 50 ಸಾವಿರಕ್ಕೂ ಹೆಚ್ಚು ಹಣ ಹಾಗೂ ಮೂರು ಮೊಬೈಲ್ ಗಳನ್ನು ಕಸಿದುಕೊಂಡು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಈ ದಾಳಿಯ ಬಗ್ಗೆ ತಮಗೆ ಅನ್ನ ನೀಡುವ ಇಲಾಖೆಗೆ ಹಾಗೂ ಠಾಣೆಯ ಅಧಿಕಾರಿಗೆ ತಿಳಿಸದೆ ಅದೇ ದುಡ್ಡಿನಲ್ಲಿ ಜಾತ್ರೆಯನ್ನು ಮಾಡಿದ್ದರು.ಆದ್ರೆ ಮೊಬೈಲ್ ಗಾಗಿ ಪ್ರತಿದಿನವೂ ಹೆಡ್ ಕಾನ್ಸ್ಟೇಬಲ್ ಬಳಿ ಅಲೆದು ಅಲೆದು ಸುಸ್ತಾಗಿದ್ದ ಯುವಕ ಸಂಘಟನೆಯ ಅಧ್ಯಕ್ಷನೊಬ್ಬನ ಬಳಿ ಈ ಮಾತನ್ನು ಹೇಳಿದಾಗ ಹೆಡ್ ಕಾನ್ಸ್ಟೇಬಲ್ ನ ಪವಾಡ ಬಯಲಿಗೆ ಬಂದಿದೆ.
ಆಗ ಅಧ್ಯಕ್ಷ ಈ ಕುರಿತು ಠಾಣೆಯ ಅಧಿಕಾರಿ ಮುಂದೆ ಸಿಬ್ಬಂದಿ ಮಾಡಿದ ಖರಾಬ ಕೆಲಸದ ಬಗ್ಗೆ ಹೇಳಿದಾಗ ಸಿಬ್ಬಂದಿ ತನ್ನ ಬಳಿ ಮೂರು ತಿಂಗಳಿಂದ ಇಟ್ಟುಕೊಂಡಿದ್ದ ಮೊಬೈಲ್ ಅನ್ನು ಯುವಕನಿಗೆ ಒಪ್ಪಿಸಿದ್ದಾನೆ,ಆದ್ರೆ ಈ ನಡುವೆ ತನ್ನ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಹೆಸರಿಗೆ ಮಸಿ ಬಳಿಯುವ ಕಾರ್ಯವನ್ನು ಮಾಡಿದ ಇಂತಹ ಹೆಡ್ ಕಾನ್ಸ್ಟೇಬಲ್ ಮೇಲೆ ಕಮಿಷನರೇಟ್ ನ ಹೆಡ್ ಬಾಸ್ ಏನು ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಇದೀಗ ಕಾದು ನೋಡಬೇಕಿದೆ.