ಇದೇ ಫೆಬ್ರುವರಿ ’14’ ರಂದು ಅದು ಅಸ್ತಿತ್ವಕ್ಕೆ ಬಂದೇ ಬರತ್ತೇ ಎಂದ ಸ್ವಾಮೀಜಿ.
ಹುಬ್ಬಳ್ಳಿ: ಧರ್ಮ ಜಾಗೃತಿ, ಸಂಸ್ಕಾರ ಉಣಬಡಿಸುವ ಉದಾತ್ತ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಪಂಚಮಸಾಲಿ ಸಮಾಜದ ಮೂರನೇಯ ಪೀಠ ಫೆ.14 ರಂದು ಜಮಖಂಡಿ ತಾಲ್ಲೂಕಿನ ಆಲಗೂರದಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಪ್ರಥಮ ಜಗದ್ಗುರುಗಳಾಗಿ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮನಗೂಳಿ ಮಠದ ಸಂಗನಬಸವ ಸ್ವಾಮೀಜಿ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಶ್ರೇಯೋಭಿವೃದ್ಧಿ, ಉದಾತ್ತ ಸಂಸ್ಕಾರ ಮೂಡಿಸುವ ದೃಷ್ಟಿಯಿಂದ ಈ ಪೀಠ ಸ್ಥಾಪನೆಯಾಗುತ್ತಿದೆ. ಪಂಚಮಸಾಲಿ ಸಮುದಾಯದ ಪಂಚ ಪೀಠಗಳಾಗಬೇಕು ಎಂಬುದು ಹರಿಹರ ಪೀಠದ ಹಿಂದಿನ ಜಗದ್ಗುರು ಡಾ.ಮಹಾಂತ ಶ್ರೀಗಳ ಕನಸಿತ್ತು. ಅವರ ಆಶಯಗಳಿಗನುಗುಣವಾಗಿಯೇ ಈ ಮೂರನೇಯ ಪೀಠ ಸ್ಥಾಪನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೂಡಲಸಂಗಮ, ಹರಿಹರ ಪೀಠಗಳು ಧರ್ಮ ರಕ್ಷಣೆ, ಸಂಸ್ಕಾರ ಕಲಿಸುವುದು, ಧಾರ್ಮಿಕ ಭೋದನೆ ಮಾಡಿಲ್ಲ. ಹಾಗಾಗಿ ಮೂರನೇ ಪೀಠ ಸ್ಥಾಪನೆಯಾಗುತ್ತಿದೆ. ಮೂರನೇ ಪೀಠ ಸ್ಥಾಪನೆಗೆ ಸಮಾಜದ 60 ಸ್ವಾಮೀಜಿಗಳ ಬೆಂಬಲವಿದ್ದು, ಸಮಾಜದ ಜನರಿಗೆ ಉತ್ತಮ ಸಂಸ್ಕಾರ ನೀಡಲು ಮೂರನೇ ಪೀಠ ಅಸ್ತಿತ್ವಕ್ಕೆ ಬರಲಿದೆ. ಪಂಚಮಸಾಲಿ ಮೂರನೇ ಪೀಠ ಪಂಚ ತತ್ವಗಳ ಆಧಾರದಲ್ಲಿ ಸ್ಥಾಪನೆಯಾಗುತ್ತಿದೆ. ಮೂರನೇ ಪೀಠ ಪರ್ಯಾಯ ಪೀಠವೂ ಅಲ್ಲ, ಸಮಾಜ ಒಡೆಯುವ ಕೆಲಸವನ್ನು ಮಾಡಿಲ್ಲ. ಇದು ಪಂಚಮಸಾಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ನೀಡಲು ಮಾಡಲಾಗುತ್ತಿದೆ ಎಂದರು.